ಮನುಷ್ಯನ ದುರಾಸೆಗೆ ಪರಿಸರ ಬಲಿ : ನ್ಯಾ.ಸಂದೀಪ್
ಲಿಂಗಸುಗೂರು : ಭೂಕಂಪ, ಸುನಾಮಿಯಂಥಹ ಪ್ರಕೃತಿ ವಿಕೋಪದ ಕೃತ್ಯಗಳು ಪರಿಸರದ ವಿನಾಶದಿಂದಲೇ ಜರುಗುತ್ತವೆ. ಮನುಷ್ಯನ ಅತಿಯಾಸೆಗೆ ಪರಿಸರ ಬಲಿಯಾಗುತ್ತಿರುವುದು ದುರಂತ. ಎಲ್ಲರೂ ಜಾಗೃತರಾಗುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಈ
ಮೂಲಕ ಪ್ರಕೃತಿ ಸಂಕುಲವನ್ನು ಕಾಪಾಡಬೇಕೆಂದು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶ ಸಂದೀಪ್ ಪಾಟೀಲ್ ಅಭಿಪ್ರಾಯ ಪಟ್ಟರು.
ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಕಾನೂನು ಸೇವಾಸಮಿತಿ,ನ್ಯಾಯವಾದಿಗಳ ಸಂಘ ಹಾಗೂ ಪುರಸಭೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಕೃತಿ ಮುನಿದರೆ ಮನುಕುಲಕ್ಕೆ ವಿನಾಶ ಕಾದಿದೆ. ಭಾರತೀಯ ಪರಂಪರೆ ಸಂಪ್ರದಾಯದಲ್ಲಿ ನಿಗರ್ಸ, ಪ್ರಾಣಿ-ಪಕ್ಷಿಗಳಿಗೆ, ಜಲಚರಗಳಿಗೆ ಮಹತ್ವವಿದೆ. ಆಧುನಿಕತೆಯ ಭರಾಟೆಯಲ್ಲಿ ವಿಜ್ಞಾನ-ತಂತ್ರಜ್ಞಾನ
ಬೆಳೆದಂತೆ ಪ್ರಕೃತಿ ಸಂಪತ್ತು ಹಾಳಾಗುತ್ತಿದೆ. ನಿಸರ್ಗವನ್ನು ನಾವು ಕಡೆಗಣಿಸಿದರೆ, ನಮ್ಮನ್ನು ನಿಸರ್ಗ ಕಡೆಗಣಿಸುತ್ತದೆ. ಹೀಗಾಗ ಪ್ರತಿಯೊಬ್ಬರೂ ಪರಿಸರ ಬೆಳೆಸುವ ಜೊತೆಗೆ ನೀರನ್ನು ಮಿತವಾಗಿ ಬಳಸುವ ರೂಢಿ ಹಾಕಿಕೊಳ್ಳಬೇಕೆಂದು ಕರೆ ನೀಡಿದರು.
ಹೆಚ್ಚುವರಿ ನ್ಯಾಯಾಧೀಶ ಮಂಜುನಾಥ ಪಾನಘಂಟಿ, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ನ್ಯಾಯವಾದಿಗಳ ಸಂಘದ ಅದ್ಯಕ್ಷ ಜಂಬಣ್ಣ
ಮಂಚಾಲಿ, ಪಿಎಸ್ಐ ಪ್ರಕಾಶರೆಡ್ಡಿ ಡಂಬಳ್ ಸೇರಿ ಇತರರು ವೇದಿಕೆಯಲ್ಲಿ
ಇದ್ದರು.

