ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಟ್ರಾಕ್ಟರ್ ಪರೇಡ್
ಲಿಂಗಸುಗೂರು : ಕೇಂದ್ರ ಸರಕಾರದ ರೈತ ವಿರೋಧಿ ಕೃಷಿ ಕಾಯ್ದೆಯನ್ನು ವಿರೋಧಿಸಿ ಸಂಯುಕ್ತ ಹೋರಾಟ ಸಮಿತಿ ಕಾರ್ಯಕರ್ತರು ರೈತರು ಟ್ರಾಕ್ಟರ್ ಪರೇಡ್ ನಡೆಸಿದರು.
ಸ್ಥಳೀಯ ಎಪಿಎಂಸಿ ಪ್ರಾಂಗಣದಿಂದ ಹೊರಟ ಟ್ರಾಕ್ಟರ್ ಪರೇಡ್ ರ್ಯಾಲಿ ಬಸ್ಟಾಂಡ್ ವೃತ್ತದ ವರೆಗೆ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸಲು ಮುಂದಾಗಿವೆ. ಅವುಗಳನ್ನು ಕೂಡಲೇ ಹಿಂಪಡೆಯಬೇಕೆಂದು ಕಳೆದ ಎರಡು ತಿಂಗಳಿಂದ ದೆಹಲಿಯಲ್ಲಿ ನಿರಂತರವಾಗಿ ಲಕ್ಷಾಂತರ ರೈತ ಕಾರ್ಮಿಕರು ಹೋರಾಟ ನಡೆಸುತ್ತಿದ್ದರೂ ಸರಕಾರ ಮಾತ್ರ ಯಾವುದಕ್ಕೂ ಸ್ಪಂಧನೆ ನೀಡದೇ ಇರುವುದು ವಿಷಾದನೀಯ.
ಈ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ರೈತರು ಚಳುವಳಿಯನ್ನು ಉಗ್ರವಾಗಿ ಮಾಡಲು ತೀರ್ಮಾನಿಸಿದ್ದರಿಂದ ಟ್ರಾಕ್ಟರ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಪ್ರತಿಭಟನೆ ನೇತೃತ್ವ ವಹಿಸಿದ್ದ ಮುಖಂಡ ರಮೇಶ ವೀರಾಪೂರ ತಿಳಿಸಿದರು.
ಕರ್ನಾಟಕ ರೈತ ಸಂಘ, ಹಸಿರು ಸೇನೆ, ಕಿಸಾನ್ ಕಾಂಗ್ರೆಸ್, ಎಸ್ಎಫ್ಐ, ಎಸ್ಡಿಪಿಐ, ದಲಿತಪರ ಸಂಘಟನೆ, ಭೀಮ ಆರ್ಮಿ ಸೇರಿ ಹಲವು ಸಂಘಟನೆಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.

