80 ಕೋಟಿ ರೂ. ಸೋಲಾರ್ ಪಾರ್ಕ್, 8.32 ಕೋಟಿ ರೂ. ರಸ್ತೆ ಅಭಿವೃದ್ಧಿ ಹಟ್ಟಿ ಚಿನ್ನದಗಣಿಯ ಅಭಿವೃದ್ಧಿಗೆ ಅದ್ಯಕ್ಷ ವಜ್ಜಲ್ರಿಂದ ಐತಿಹಾಸಿಕ ತೀರ್ಮಾನ
ಲಿಂಗಸುಗೂರು : ಮನೆಯವರಿಗೇ ಗೊತ್ತು ಮನೆಯ ಸಮಸ್ಯೆಗಳು ಎನ್ನುವಂತೆ ಸ್ಥಳೀಯರಿಗೆ ಆಧ್ಯತೆ ನೀಡಿದ್ದರಿಂದ ಹಟ್ಟಿ ಚಿನ್ನದಗಣಿ ಕಂಪನಿಯ ಅಭಿವೃದ್ಧಿಗೆ ನೂತನ ಅದ್ಯಕ್ಷ ಮಾನಪ್ಪ ವಜ್ಜಲ್ರು ಐತಿಹಾಸಿಕ ತೀರ್ಮಾನ ಕೈಗೊಂಡಿರುವದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಚಿನ್ನದಗಣಿಯ ವಿದ್ಯುತ್ ವೆಚ್ಚ ತಗ್ಗಿಸಲು 80 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 80 ಎಕರೆ ಭೂಮಿಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲು ಆಡಳಿತ ಮಂಡಳಿ ಮುಂದಾಗಿದೆ. ಅಲ್ಲದೇ, ಗಣಿ ಪ್ರದೇಶವಾದ ಹಟ್ಟಿ-ಚಿಂಚರಕಿ-ಊಟಿ ಗಣಿವರೆಗೆ 8.32 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ರಸ್ತೆ ನಿರ್ಮಾಣಕ್ಕೆ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಗಣಿ ಅದ್ಯಕ್ಷ ಮಾನಪ್ಪ ವಜ್ಜಲ್ ತಿಳಿಸಿದರು.
ಇಷ್ಟು ದಿನಗಳ ಕಾಲ ಅನ್ಯ ಜಿಲ್ಲೆಯವರು ಅದ್ಯಕ್ಷರಾಗಿ ನೇಮಕವಾಗುತ್ತಿದ್ದರು. ಗಣಿಯ ಅಭಿವೃದ್ಧಿಯ ಬಗ್ಗೆ ಕೇವಲ ಮಾತುಗಳನ್ನಾಡುತ್ತಾ, ಬೆಂಗಳೂರಿನಲ್ಲಿಯೇ ಐಶಾರಾಮಿಯಾಗಿ ಕಾಲ ಕಳೆಯುತ್ತಿದ್ದರು. ಆದರೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಅರಿವಿರುವ ಅದ್ಯಕ್ಷರ ಜರೂರತ್ತು ಕಂಪನಿಗೆ ಇತ್ತು. ಇದನ್ನರಿತ ಸರಕಾರ ಸೂಕ್ತ ವ್ಯಕ್ತಿಯಾದ ಮಾನಪ್ಪ ವಜ್ಜಲ್ರನ್ನು ಈ ಸ್ಥಾನಕ್ಕೆ ನೇಮಕ ಮಾಡಿದೆ. ಅಧಿಕಾರ ವಹಿಸಿಕೊಂಡಾಗಿನಿಂದ ವಜ್ಜಲ್ರು ಗಣಿಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವ ಭರವಸೆಯೂ ವಜ್ಜಲ್ ನೀಡಿದ್ದಾರೆ.

