ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಅನುಷ್ಠಾನಕ್ಕೆ ಒತ್ತಾಯ
ಲಿಂಗಸುಗೂರು : 2012 ಸೆಪ್ಟೆಂಬರ್ 15ರ ಒಳಗಾಗಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಅನುಷ್ಠಾನ ಮಾಡುವುದಾಗಿ ಅಧಿವೇಶನದಲ್ಲಿ ಮಾತು ಕೊಟ್ಟಿದ್ದ ಸರಕಾರ, ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಮೂಲಕ ಶೀಘ್ರ ಅನುಷ್ಠಾನಕ್ಕೆ ಮುಂದಾಗಬೇಕೆಂದು ತಾಲೂಕು ಪಂಚಮಸಾಲಿ ಸಮಾಜದ ಮುಖಂಡರು ಒತ್ತಾಯಿಸಿದರು.
ಶಿರಸ್ತೆದಾರ ಶಾಲಂಸಾಬರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಅವರು, ಲಿಂಗಾಯತ ಪಂಚಮಸಾಲಿ ಹಾಗೂ ಉಪನಾಮಗಳಾದ ಗೌಡಲಿಂಗಾಯತ, ಮಲೆಗೌಡ, ದೀಕ್ಷಾ ಪಂಚಮಸಾಲಿಗಳಿಗೆ 2ಎ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಬೆಂಗಳೂರಿನ ಆಡಳಿತದ ಪೀಠದವರೆಗೆ ಮಹಾರ್ಯಾಲಿ ನಡೆಸಿ, 23 ದಿನಗಳ ನಿರಂತರ ಧರಣಿ ಸತ್ಯಾಗ್ರಹ ಮಾಡಿದ ಮೇಲೆ ವಿಜಯಪುರ ಶಾಸಕ ಯತ್ನಾಳ್ರು ಸದಸದೊಳಗೆ ನಿರಂತರ ಹಕ್ಕೊತ್ತಾಯ ಮಾಡಿದ ಪರಿಣಾಮ, ಮಾರ್ಚ್ 15ರಂದು ಬರುದ ಆರು ತಿಂಗಳೊಳಗೆ (ಸೆ.15) ಮೀಸಲಾತಿ ಸೌಲಭ್ಯ ಕಲ್ಪಿಸುವುದಾಗಿ ಸರಕಾರ ಕೊಟ್ಟಿರುವ ಮಾತು ಕಡತಗಳಲ್ಲಿ ದಾಖಲಾಗಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಕೂಡಲೇ ಕ್ರಮಕ್ಕೆ ಮುಂದಾಗಬೇಕು. ವಿಳಂಬವಾದಲ್ಲಿ ಅ.1ರಂದು ಬೆಂಗಳೂರಿನ ಸ್ವತಂತ್ರ್ಯ ಉದ್ಯಾನವನದಲ್ಲಿ ಜಗದ್ಗುರುಗಳ ಸಾನಿಧ್ಯದಲ್ಲಿ ನಿರಂತರವಾಗಿ ಧರಣಿ ಹಮ್ಮಿಕೊಳ್ಳುವ ಮೂಲಕ ಪ್ರತಿಭಟಿಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಮಾಜದ ಮುಖಂಡರಾದ ಅಮರೇಶ ತಾವರಗೇರಾ, ಸಿಸಿ ಕರಡಕಲ್, ಆದೇಶಪ್ಪ, ವಿಜಯಕುಮಾರ ಕಾಳಾಪೂರ, ಸುಭಾಸ್ ಪಲ್ಲೇದ್, ರುದ್ರಗೌಡ, ಶಿವಾನಂದ, ಮಂಜುನಾಥ, ಶಂಕ್ರಪ್ಪ ಗುಂಡಸಾಗರ ಸೇರಿ ಇತರರು ಇದ್ದರು.

