ಕಳುವು ಪ್ರಕರಣ : ಇಬ್ಬರು ಆರೋಪಿಗಳ ಬಂಧನ, 2.70 ಲಕ್ಷ ಸಾಮಗ್ರಿ ವಶಕ್ಕೆ
ಲಿಂಗಸುಗೂರು : ಎರಡು ಪ್ರತ್ಯೇಕ ಕಳುವಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರನ್ನು ಬಂಧಿಸಿರುವ ಲಿಂಗಸುಗೂರು ಪೋಲಿಸರು, ಬಂಧಿತರಿಂದ ನಗದು ಸೇರಿ 2.70 ಲಕ್ಷ ರೂಪಾಯಿ ಬೆಲೆಬಾಳುವ ಸಾಮಗ್ರಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ರೋಡಲಬಂಡಾ ಗ್ರಾಮದ ಖಲೀಲ್ ಚಟನೂರು ಎನ್ನುವ ಆರೋಪಿಯಿಂದ ಪಂಪ್ಸೆಟ್, ಆಯಿಲ್ ಇಂಜಿನ್, ಬೋರ್ ಹಾಗೂ ಒಂದು ದ್ವಿಚಕ್ರ ವಾಹನ ಸೇರಿ 1.15 ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಾಗೆಯೇ, ಮಸ್ಕಿ ಪಟ್ಟಣದ ಹನುಮಂತ ಮೋಡಿಕಾರ ಎನ್ನುವ ಆರೋಪಿಯಿಂದ ಒಂದು ಅಟೋ, ಎರಡು ದ್ವಿಚಕ್ರ ವಾಹನಗಳು, 2 ಮೊಬೈಲ್, 5 ಸಾವಿರ ರೂಪಾಯಿ ನಗದು ಸೇರಿ 1.55 ಲಕ್ಷ ರೂಪಾಯಿ ಸೇರಿ ಇಬ್ಬರೂ ಆರೋಪಿಗಳಿಂದ ಒಟ್ಟು 2.70 ಲಕ್ಷ ರೂಪಾಯಿ ಬೆಲೆಯ ಸಾಮಗ್ರಿಗಳನ್ನು ವಶಕ್ಕೆ ವಶಪಡೆಯಲಾಗಿದೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಸಜ್ಜನ್ ತಂಡ ರಚನೆ ಮಾಡಿ ಪಿಎಸ್ಐ ಪ್ರಕಾಶರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದು ಕಳುವಾದ ವಾರದಲ್ಲೇ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಹಾಗೂ ಡಿವೈಎಸ್ಪಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಲ್ಲಿಯೂ ಪೋಲಿಸರ ತುರ್ತು ಸ್ಪಂದನೆಗೆ ಶ್ಲಾಘನೀಯ ಮಾತುಗಳು ಕೇಳಿ ಬರುತ್ತಿವೆ.
ತನಿಖಾ ತಂಡದಲ್ಲಿ ಮುಖ್ಯ ಪೇದೆ ಶರಣಪ್ಪರೆಡ್ಡಿ, ಪೇದೆಗಳಾದ ನಾಗರಾಜ ಕೆ, ಈರಣ್ಣ, ಶಿವಮೂರ್ತಿ, ಶ್ರೀಕಾಂತ, ತಾಂತ್ರಿಕ ಸಹಾಯಕ ಅಜೀಮ್ಪಾಷಾ ಸೇರಿ ಇತರರು ಇದ್ದರು.

